“ಆಕೆ ಲವಲವಿಕೆಯ ತರುಣಿ. ಮಾತೋ ಚಟಪಟಗುಟ್ಟುವ ಅರಳಿನಂತೆ. ಅವಳಿದ್ದಲ್ಲಿ ಮಾತು, ಕತೆ, ಜೋಕುಗಳು. ನಿನ್ನೆ ನೋಡಿದ ಸಿನೆಮಾ, ಯಾವುದೋ ಫ್ರೆಂಡ್ ಕಳುಹಿಸಿದ ಮೆಸೇಜ್, ಕಾಲೇಜಿಗೆ ಬರುತ್ತಿರುವಾಗ ನೋಡಿದ ತಮಾಷೆಯ ದೃಶ್ಯ ಹೀಗೆಲ್ಲ. ದಿಢೀರನೆ ಆಕೆ ಮೌನವಾದಳು. ಮಾತಿಲ್ಲ, ಕತೆಯಿಲ್ಲ. ಯಾರಾದರೂ ಮಾತನಾಡಿಸಿದರೆ ಸಿಡಾರನೆ ರೇಗಿ ಬಿಡುವಳು. ಸಾಲದ್ದಕ್ಕೆ ಉಳಿದವರೆಲ್ಲ ತನ್ನ ಬಗ್ಗೆಯೇ ಏನೋ ಮಾತನಾಡುತ್ತಾರೆ , ಅಪಹಾಸ್ಯ ಮಾಡಿ ನಗುತ್ತಾರೆ ಎನ್ನುವ ಭಾವನೆ, ಸಂಶಯ. ಮಂದಿ ನಾಲ್ಕು ದಿನ ನೋಡಿದರು. ಸಮಾಧಾನಿಸಲು ಪ್ರಯತ್ನಿಸಿದರು. ಈಕೆ ಮತ್ತಷ್ಟು ವ್ಯಗ್ರಳಾದಂತೆಲ್ಲ ಅವರೆಲ್ಲ ದೂರ ಸರಿದರು. ಈಗ ಆಕೆ ಒಂಟಿ. ಗಾಸಿಪ್ ಗೆ ಬಳಲಿದವಳಲ್ಲಿ ಒಬ್ಬಳು.
ಇವುಗಳಿಂದ ಪಾರಾಗಲೂ ಒಂದೇ ಒಂದು ಮಾರ್ಗ. ಆದಷ್ಟು ಮೌನವಾಗಿ ಇರುವುದು, ಅಗತ್ಯವಿದ್ದರೆ ದಿಟ್ಟತನದಿಂದ ಮಾರುತ್ತರೆ ಕೊಡುವುದು. ‘ಮೈಲ್ಡ್’ ಆಗಿರುವುದು ಎಲ್ಲಾ ಕಾಲಕ್ಕೂ ಸರಿಯೆಂದೇನಲ್ಲ. ಇನ್ನೂ ಒಳ್ಳೆಯ ವಿಧಾನ ಎಂದರೆ ಯಾರ ಬಗ್ಗೆಯೂ ನಾವೂ ಹೆಚ್ಚು ಮಾತನಾಡದೆ ಏನಿದ್ದರೂ ನೇರವಾಗಿ ಹೇಳಿಕೊಳ್ಳುವುದು.
ಮೇಲೆ ಹೇಳಿದ ಹುಡುಗಿ ಗಟ್ಟಿ ಮನಸ್ಸು ಮಾಡಿ ಬದುಕನ್ನು ಕೈಗೆತ್ತಿಕೊಂಡಳು. ಲೈಬ್ರೆರಿಯ ಪುಸ್ತಕಗಳು ಆಕೆಯನ್ನು ಕೈಬೀಸಿ ಕರೆದುವು. ಉತ್ತಮ ಪರ್ಸೆಂಟೇಜಿನಿಂದ ಮಾರ್ಕ್ಸ್ ತೆಗೆದು ಒಳ್ಳೆಯ ಉದ್ಯೋಗ, ಪತಿ , ಮಕ್ಕಳು ಹೀಗೆಲ್ಲ..ಈಗ ಆಕೆ ಸುಖಿ.
ನಮ್ಮ ಸಮಾಜದಲ್ಲಿ ವಿಧವೆಯರು, ವಿಚ್ಛೇದಿತೆಯರು, ಶೋಷಿತರು, ಪರಿತ್ಯಕ್ತರು ..ಇವರಿಗೆ ಸರಿಯಾದ ಸ್ಥಾನವೆಂಬುದಿಲ್ಲ. ‘ಡೈವೋರ್ಸ್’ ಎನ್ನುವ ಹಸರು ಕೇಳಿದರೆ ಸಾಕು, ಹೌಹಾರಿ ಬಿಡುತ್ತಾರೆ. ಅದೂ ಅಲ್ಲದೆ ಹೆಣ್ಣನ್ನೇ ತಾಳ್ಮೆಯಿಲ್ಲದವಳೆಂದೋ ಹೊಂದಾಣಿಕೆ ಇಲ್ಲದವಳೆಂದೋ ದೂಷಿಸುತ್ತಾರೆ.
ಈಕೆ ನರಳಿದಳು, ಬಿಕ್ಕಿದಳು, ರೌದ್ರಾವತಾರ ತಾಳಿದಳು, ಮರಳಿ ಪ್ರಶಾಂತವಾಗಿ ಚಿಂತಿಸಿ ಮಗುವಿನ ಭವಿತವ್ಯಕ್ಕೋಸ್ಕರ ಗಟ್ಟಿಯಾಗಿ ನಿಂತು ಹೋರಾಡಿದಳು. ಈಗ ಸಮಾಜ ಆಕೆಯ ಪರಿಶ್ರಮವನ್ನು, ತ್ಯಾಗವನ್ನು ಗುರುತಿಸಿದೆ. ಅವಳ ಕೆಚ್ಚನ್ನು, ಹೋರಾಟದ ಛಲವನ್ನು ಗೌರವಿಸುತ್ತಿದೆ. ಆಕೆ ಕೂಡ ಸೋಶಿಯಲ್ ಸರ್ವಿಸ್ ಮುಖಾಂತರ ನೊಂದವರ ಕಣ್ಣಿರು ಒರಸುತ್ತಿದ್ದಾಳೆ.
ಆಕೆ ಚೂಟಿಯಾದ ಹುಡುಗಿ. ಓದಬೇಕು, ಇನ್ನಷ್ಟು ಓದಬೇಕು, ದೊಡ್ಡ ಕೆಲಸ ಪಡೆಯಬೇಕು ಹೀಗೆಲ್ಲಾ ಆಸೆ. ಜಾತಕ ಪ್ರಕಾರ ಆಕೆಗೆ ಹದಿನೆಂಟನೆಯ ವಯಸ್ಸಿಗೆ ಮದುವೆಯಾಗದಿದ್ದರೆ ಆಮೇಲೆ ಮದುವೆ ಯೋಗವಿಲ್ಲವಂತೆ. ಸರಿ. ಕಾಲೇಜು ಬಿಡಿಸಿ ಆಕೆಯನ್ನು ಮದುವೆ ಮಾಡಿಕೊಟ್ಟರು. ತನಗಿಂತ ದಡ್ಡಿಯರು ಡಿಗ್ರಿ ಪಾಸು ಮಾಡಿಕೊಂಡು ಉದ್ಯೋಗ, ಭಡ್ತಿ, ಹೀಗೆಲ್ಲಾ ಆರಾಮವಾಗಿದ್ದರೆ ಆಕೆ ದೊಡ್ಡಾ ಸಂಸಾರದ ನೂರೆಂಟು ತಾಪತ್ರಯಗಳ ನಡುವೆ ಕೈಯಲ್ಲಿ ತನ್ನದೇ ಕಾಸು ಕೂಡ ಇಲ್ಲದೆ ನರಳುತ್ತಿದ್ದಾಳೆ.
‘ಮದುವೆ’ ಎನ್ನುವ ಸ್ವಂತ ವಿಷಯ ಕೂಡ ಅನೇಕ ಆಯಾಮಗಳಿಂದ ಕೂಡಿದ ದೇಶ ನಮ್ಮದು. ಅದೆಷ್ಟೋ ಅದುಮಿಟ್ಟ ಕಣ್ಣೀರು, ಕನಸುಗಳು ಈ ಕೌಟುಂಬಿಕ ವ್ಯವಸ್ಥೆಯಲ್ಲಿ . ಕಟ್ಟುಪಾಡುಗಳು, ಒತ್ತಡಗಳೋ ನೂರೆಂಟು. ಈ ಹುಡುಗಿ ಮಾತಿಲ್ಲದೆ ಮೌನವಾಗಿ ಬಾಳಬಂಡಿ ಸವೆಸಿದಳು. ಮಕ್ಕಳು ಬೆಳೆದು ದೊಡ್ಡವರಾದಂತೆ ಆಕೆಯ ಕನಸುಗಳು ಗರಿಗೆದರಿದುವು. ತನ್ನ ಭಾವನೆಗಳನ್ನು ಅನುಭವಗಳನ್ನು ಅಕ್ಷರ ರೂಪಕ್ಕಿಳಿಸುತ್ತ ಕವಯಿತ್ರಿಯಾಗಿ, ಕಥೆಗಾರ್ತಿಯಾಗಿ ಬೆಳೆದಳು.
ಒಟ್ಟಿನ ಮೇಲೆ ವಿವಾಹ ಸಂಸ್ಥೆ, ಕೌಟುಂಬಿಕ ವ್ಯವಸ್ಥೆ, ಧಾರ್ಮಿಕತೆ, ನೈತಿಕ ರೀತಿ ರಿವಾಜುಗಳು ಇಲ್ಲದಿದ್ದರೆ ಎಷ್ಟು ಕಷ್ಟವೋ, ಅವು ಈಗಿರುವಂತೆ ಉಂಟು ಮಾಡುವ ತಲ್ಲಣಗಳೂ ಅಷ್ಟೇ ‘ರಿಯಲ್’ ಆಗಿವೆ.
– ಜಯಶ್ರೀ ಬಿ. ಕದ್ರಿ
No comments:
Post a Comment